ಕಾಡತಾವ ನೆನಪು...
ಈ ಬಾರಿಯ ದೀಪಾವಳಿ ನನ್ ಪಾಲಿಗೆ ಬೆಳಿಕಿನ ಹಬ್ಬ ಅಲ್ಲ; ಬದಲಿಗೆ ತಮಸು ಆವರಿಸಕೊಂಡ ದಿಬ್ಬ! ರೂಮಿನ ಮೇಲೆ ನಿಂತು (ಬೆಂಗಳೂರು) ಆಕಾಶದ ಚುಕ್ಕೆ ಎಣಿಸುವ ಪ್ರಯತ್ನದಲ್ಲಿದ್ದೆ, ಅಷ್ಟರಲ್ಲೇ ಏನೆನೋ ಆಲೋಚನೆಗಳು ಆಗಂತುಕವಾಗಿ ಮನಸಿನ ಮೂಲೆಯಲ್ಲಿ ಉದ್ಭವಿಸುತ್ತಿದ್ದವು. ಕಳೆದ ಬಾರಿಯ ದೀಪಾವಳಿ ಕುರಿತು ಆಲೋಚಿಸುವಾಗ ಈ ಬಾರಿಯ ದೀಪಾವಳಿ ನನಗೆ ಮೂದಿಸುತಿತ್ತು. ಆಕಾಶಕ್ಕೆ ಸೊಂಯ್ ಎಂದು ಹಾರಿದ ಬಾಣಗಳು ಸೀದಾ ಬಂದು ನನ್ನ ಹೃದಯಕ್ಕೆ ಘಾಸಿಗೊಳಿಸುತ್ತಿದ್ದವು. ಹಾರುತ್ತಿದ್ದ ಪಟಾಕಿಗಳು ಅಂತರಾತ್ಮವನ್ನು ಕದಲಿಸುತ್ತಿದ್ದವು. ಹೀಗೆಲ್ಲಾ ನನಗಾಗಿದ್ದು ಇದೇ ಮೊದಲು.
ಈ ಹಿಂದೆ ನನಗೆ ಎಂದೂ ಹೀಗಾಗಿರಲಿಲ್ಲ. ದೀಪಾವಳಿ ಅಂದ್ರೆ ನನಗೆ ಅತೀ ಪ್ರೀತಿಯ ಹಬ್ಬ, ಎಲ್ಲ ಹಬ್ಬಗಳಿಗಿಂತ ನಾನು ಪ್ರೀತಿಸುವ ಹಾಗೂ ಇಷ್ಟಪಡುವ ಹಬ್ಬ. ಇದರೊಂದಿಗೆ ನನ್ನ ಅನೇಕ ಭಾವಚುಂಬಿ ಕನಸುಗಳು ತಳುಕುಹಾಕಿಕೊಂಡಿವೆ. ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ. ಆ ದಿನ, ಅದನ್ನೂ ನಾನು ಸಾಯುವವರೆಗೂ ಮರೆಯಲು ಸಾಧ್ಯವೇ ಇಲ್ಲ. ಇದು ಮಾತ್ರ ಸ್ಪಟಿಕದಷ್ಟು ನಿಚ್ಚಳ, ಸ್ಪಷ್ಟ. ಅದು ಕೂಡ ದೀಪಾವಳಿಯ ದಿನವೇ ಆಗಿತ್ತು. ಆಗ ನಾನು ಬರೀ ಆರೇಳು ವರ್ಷದ ಪೋರ(ಬಾಲಕ). ಕಾಂಪೌಂಡ್ ಮೇಲೆ ಕುಳಿತು ನನ್ನ ಓಣೆಯಲ್ಲಿ ಪಟಾಕಿಹಾರಿಸುತ್ತಿದ್ದ ಬೇರೆಯವರನ್ನು ನೋಡುತ್ತಿದ್ದೆ. ಅವರು ಖುಷಿಯಿಂದ ಕುಟುಂಬದೊಂದಿಗೆ ಪಟಾಕಿ ಹಾರಿಸುತ್ತಿದ್ದರು. ನಾನೂ ಅವರಂತೆಯೇ ಬಾಣ-ಬಿರುಸುಗಳನ್ನು ಹಾರಿಸಬೇಕು, ಮನಃತುಂಬಿ ಕುಣಿದಾಡಬೇಕು, ಪಟಾಕಿಯ ಸದ್ದು ಒಳಗೆ ಹಾಸಿಗೆಯಲ್ಲಿ ಮಲಗಿದ್ದ ಅಣ್ಣ ಹಾಗೂ ಅಕ್ಕಳಿಗೆ ಎಬ್ಬಿಸಿ ಅಚ್ಚರಿಯನ್ನುಂಟುಮಾಡಬೇಕು ಎಂದು ಕುಳಿತಿದ್ದೆ. ಮುಂದೆ ನಾನೂ ವಿಭಿನ್ನಾವಿಭಿನ್ನ ಥರದ ಪಟಾಕಿಗಳನ್ನು ಹಾರಿಸುತ್ತಿರುವುದನ್ನು ಹೃದಯದಲ್ಲಿ ಧೆನಿಸಿಕೊಂಡೆ, ವ್ಹಾ...! ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು.. ಮತ್ತೆ ವಾಸ್ತವಕ್ಕೆ ಮರಳಿದೆ.
ಎಲ್ಲರೂ ಪಟಾಕಿ ಹೊಡೆದು ಮನೆಯೊಳಗೆ ತೆರಳಿದ್ದರು. ಆದರೆ, ನಾನು ಮಾತ್ರ ಅಪ್ಪನಿಗಾಗಿ ಕಾಯ್ತಾ ಕುಳಿತಿದ್ದೆ. ಬೆಳಗ್ಗೆ ನಾನು ಪಟಾಕಿ ಲಿಸ್ಟ ಮಾಡಿಕೊಟ್ಟಿದ್ದೆ, ಅಪ್ಪ ನನಗೆ ಆ ಎಲ್ಲಾ ಪಟಾಕಿಗಳನ್ನು ತರುವುದಾಗಿ ಪ್ರಾಮಿಸ್ ಮಾಡಿ ಹೋಗಿದ್ರು. ಆದ್ರೆ ರಾತ್ರಿ 10 ಗಂಟೆ ಆದರೂ ಅಪ್ಪನ ಸುಳಿವೇ ಇಲ್ಲ, ಒಳಗಡೆಯಿಂದ ಅಮ್ಮ ಕೂಗಿದಳು ಬಾರೋ ನಿಮ್ಮಪ್ಪ ಇವತ್ತೂ ಲೇಟೆ.. ಬಂದು ಊಟ ಮಾಡಿ ಮಲ್ಕೋ ಎಂದರು. ಅದರೆ ಮನಸಿನಲ್ಲಿ ಮಂಡಕ್ಕಿ ತಿನ್ನುತಿದ್ದ ನನ್ನ ಈ ಹಾಳು ವಾಂಛೆ ನಿದ್ದೆ ಮಆಡಲು ಬಿಟ್ಟೀತೆ.
ಆಯ್ತಮ್ಮ ಇನ್ನೇನು ಅಪ್ಪ ಬರ್ಬಹುದು ಎಂದು ಓಣೆಯ ರಸ್ತೆ ಕಡೆ ಕಣ್ಣು ಹಾಯಿಸಿದೆ. ಯಾರೂ ಇಲ್ಲ. ಕಣ್ಣು ರೆಪ್ಪೆ ಮುಚ್ಚುತಿದ್ದವು, ಆದರೂ ಪಟಾಕಿ ಹಾರಿಸಬೇಕೆಂಬ ನನ್ನ ಹೆಬ್ಬಯಕೆಯ ಎದುರು ನಿದ್ದೆ ಯಾವ ಲೆಕ್ಕ ಹಾಗೇ ಕುಳಿತೆ. ಕೊನೆಗೂ ನಿರೀಕ್ಷೆ ಬಸಿರು ಹರಿದು ರಸ್ತೆಯ ಮೇಲೆ ಯಾರೋ ಬರುವ ಕರಿನೆರಳು ಕಣ್ಣಿಗೆ ಕಾಣಿಸಿತು. ಅದ್ಯಾರಿರಬಹುದೆಂದು ತದೇಕ ಚಿತ್ತದಿಂದ ನೋಡಿದೆ. ದೂರ ಕಡಿಮೆ ಆಗುತ್ತಾಹೋದಂತೆ, ಆಖತ್ರಿ ಆಯ್ತು ಅಪ್ಪಾನೇ ಬರ್ತಾ ಇದಾರೆ ಅಂತಾ, ಯುನೋ ಆ ನನಗೆ ಸ್ವರ್ಗ ಜಸ್ಟ್ ಮೂರೇ ಗೇಣು! ಕಾಂಪೌಂಡ್ ಎತ್ತರ ಗಮನಿಸದೇ ಹಾರಿ ರಸ್ತೆ ಮೇಲೆ ನಿಂತೆ.. ಆಶ್ಚರ್ಯ ಅಪ್ಪನ ಕೈಯಲ್ಲಿ ಯಾವ ಬಾಣ-ಬಿರುಸೂ ಇಲ್ಲ. ಸೈಕಲ್ನಿಂದ ಕೆಳಗಿಳಿದವರೇ ಅವರಿಗೆ ನಿಲ್ಲೋದಕ್ಕೂ ಆಗುತ್ತಿಲ್ಲ. ಅಮೇಲೆ ತಾನೆ ಗೊತ್ತಾಗಿದ್ದು, ಅಪ್ಪಾ ಅವತ್ತೂ ಸುರಾಧಿನರಾಗಿದ್ದರು. ನನ್ನ ಮೂರು ಗಂಟೆಯ ನಿರೀಕ್ಷೆ ಕಣ್ಣಾಲಿಯಲ್ಲಿ ನೀರಾಗಿ ಹರಿಯಲಾರಂಭಿಸಿತು. ಕಷ್ಟಪಟ್ಟು ಕಂಟ್ರೋಲ್ ಮಾಡಿಕೊಳ್ಳಲು ಯತ್ನಿಸಿದೆ, ಆಗಲಿಲ್ಲ. ಅಮ್ಮನೆಡೆಗೆ ಓಡಿ ಗಟ್ಟಿಯಾಗಿ ತಬ್ಬಿಕೊಂಡೆ, ಅಳಲಾರಂಭಿಸಿದೆ. ಅಮ್ಮ ಕೂಡ ಅಷ್ಟೆ ನನ್ನನ್ನು ತನ್ನ ಸೆರಗಿನಲ್ಲಿ ನನ್ನನ್ನು ಅವಿತುಕೊಂಡ ಸಂತೈಸಿದಳು. ಅಪ್ಪಾ ಒಳಗೆ ಬಂದವರೇ ಅಮ್ಮನಿಗೆ ಹೊಡೆಯಲಾರಂಭಿಸಿದರು. ಇದು ನಮ್ಮ ಮನೆಯಲ್ಲಿ ನಿತ್ಯ ಕಥೆ...
ಟ್ರಸ್ಟ್ ಮಿ ಫ್ರೆಂಡ್ಸ್ ಅವತ್ತು ಪಟಾಕಿ ತರಲು ಮರೆತಿದ್ದ ನಮ್ಮಪ್ಪ ಮುಂದೆ ನನ್ನ ಭವಿಷ್ಯಕ್ಕಾಗಿ ಅಷ್ಟೊಂದು ಕಷ್ಟ ಪಡಬಹುದು ಎಂದುಕೊಂಡಿರಲಿಲ್ಲ. ಅವರು ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಅಷ್ಟೆ ಯಾಕೆ ತಮ್ಮ ಒಡಲಲ್ಲಿ ಅನೇಕ ಚಿಂತೆಗಳನ್ನು ತುಂಬಿಕೊಂಡು ನನಗೆ ಪಿಜಿ(ಪತ್ರಿಕೋದ್ಯಮ) ಓದಿಸಿದರು. ಅಂದಿನ ಅಪ್ಪನಿಗೂ ಇಂದಿನ ಅಪ್ಪನಿಗೂ ವ್ಯತ್ಯಾಸ ತಾಳೆ ಹಾಕುವುದಾದರೆ, ಕಣ್ರೆಪ್ಪೆ ಒದ್ದೆಯಾಗುತ್ತೆ. ಬಳಿಕ ನಾನೂ ಸ್ನಾತಕೋತ್ತರ ಮುಗಿಸಿ, ಸಂಯುಕ್ತ ಕನರ್ಾಟಕ ಬೆಂಗಳೂರು ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ಇವತ್ತಿಗೆ ನಾನು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಂದು ವರ್ಷ ಒಂದು ತಿಂಗಳು ಕಳೆದಿರಬಹುದು. ಅದೇ ರೀತಿ ನನ್ನ ಭವಿಷ್ಯಕ್ಕಾಗಿ ಬೆನ್ನೆಲುಬಾಗಿ, ಇಂಬಾಗಿ, ಕಸುವಾಗಿ, ಸ್ಫೂತರ್ಿಯ ಸೆಲೆಯಾಗಿ ನಿಂತಿದ್ದ ನಮ್ಮಪ್ಪ ನನ್ನನ್ನು ಬಿಟ್ಟು ಅಗಲಿ ಆರು ತಿಂಗಳುಗಳೇ ಕಳೆದಿವೆ. ಆದರೆ, ಅವರ ನೆನಪು ಮಾತ್ರ ಇನ್ನೂ ಹಸಿಹಸಿ, ಅಮ್ಮ ಕೂಡ ಅಷ್ಟೆ ಈ ದೀಪಾವಳಿಯಲ್ಲಿ ಯಾವುದೇ ಆಚರಣೆ ಮಾಡುತ್ತಿಲ್ಲ. ಮನೆಯಲ್ಲೆಲ್ಲಾ ಸೂತಕದ ಛಾಯೆ... ನಾನು ಈ ಸಲ ದೀಪಾವಳಿಗೆ ಮನೆಗೆ ಹೋಗಲಾಗಲಿಲ್ಲ. ಯಾಕೋ ಹೋಗಬೇಕೆಂದೂ ಎನಿಸುತಿಲ್ಲ. ಭಾವನೆಗಳು ಭಾರವಾಗಿ, ಕಣ್ಣಹನಿಗಳು ಬತ್ತಿಹೋಗಿವೆ ಎಂದೆನಿಸುತ್ತಿದೆ.
ಅದಕ್ಕೆ ಹೇಳಿದ್ದು, ಹೊರಗಡೆ ದೀಪಾವಳಿ ಆದರೆ ನನ್ನೊಡಲಲ್ಲಿ ದೀಪಗಳ ಹಾವಳಿ ಎಂದು..
ಫ್ರೆಂಡ್ಸ್ ಅಪ್ಪನನ್ನು ಎಂದೂ ಹೇಟ್ ಮಾಡಬೇಡಿ ಆದಷ್ಟು ದಿನ ಅವರೊಂದಿಗೆ ಖುಷಿಖುಷಿಯಿಂದ ಬದುಕಿ, ಈ ದೀಪಾವಳಿ ನಿಮ್ಮೆಲ್ಲರ ಬಾಳಲ್ಲಿ ಸುಖ, ನೆಮ್ಮದಿ, ಶಾಂತಿ ಹಾಗೂ ಬೆಳಕನ್ನು ತರಲಿ ಎನ್ನುವುದೇ ನನ್ನ ಹೆಬ್ಬಯಕೆ..