Monday, December 13, 2010

Love is sweet Poison

ಕೊನೆಗೂ ಕೂಡದ ಪ್ರೀತಿ...... 
ಮೊಬೈಲ್ ಇಲ್ಲದ ಕಾಲವದು. ಆವಾಗ ಎಲ್ಲಿ ಮೊಬೈಲ್? ತಂತ್ರಜ್ಞಾನ, ಜನಜೀವನ ಇಷ್ಟೊಂದು ಮುಂದುವರೆದಿರಲಿಲ್ಲ. ಆದರೆ ಪ್ರೀತಿಸುವ ಮನಸ್ಸುಗಳಿಗೆ ಅನುಕೂಲಕರವಾದ ಎಲ್ಲಾ ವಾತಾವರಣ ಆಗ ಇತ್ತು. ಬಹುಷ್ಯ ಈ ವಾತಾವರಣವೇ ಅವರ ಪ್ರೀತಿಯ ಹುಟ್ಟಿಗೆ ಕಾರಣವಾಯಿತೇನೋ?
ಅವರಿಬ್ಬರ ನಡುವಿನ ಸ್ನೇಹ ಯಾವಾಗ ಪ್ರೇಮವಾಗಿ ಮಾರ್ಪಟ್ಟಿತೋ ಗೊತ್ತಿಲ್ಲ. ಅದು ಪ್ರೀತಿ ಎಂದು ತಿಳಿಯುವ ಹೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು. ಅದು ಅವರ ಪದವಿಯ ಕೊನೆಯ ವರ್ಷವಾಗಿದ್ದರಿಂದ ಅವರು ಬೇರೆ-ಬೇರೆ ಸ್ಥಳಗಳಿಗೆ ಪಲಾಯನಗೈಯಲೇ ಬೇಕಾಯಿತು. ಅವನು ಉದ್ಯೋಗ ಅರಸಿ ಬೆಂಗಳೂರಿಗೆ ಹೋದನು. ಇತ್ತ ಇವಳು ಮನೆಯ ಒತ್ತಾಯಕ್ಕೆ ಮಣಿದು ಉದ್ಯೋಗದ ಸೊಲ್ಲೆತ್ತದೆ ಆಟೋಗ್ರಾಫ್ ಡೈರಿ ನೋಡುತ್ತಾ ಸುಮ್ಮನಾಗುತ್ತಿದ್ದಳು. ಮನೆಯಲ್ಲೆಲ್ಲಾ ಬರೀ ಸ್ಮಶಾನ ಮೌನ, ಚಿಗುರೆಯಂತೆ ಚೂಟಿಯಾಗಿದ್ದ ಈಕೆ ಸಮ್ಮನಾಗಿದ್ದಳು. 'ಎಷ್ಟಾದರೂ ಕಾಯಿಯಾದ ಪ್ರೀತಿ ಅಲ್ಲವೇ? ಹೂವಾಗಿದ್ದರೆ ಚಿವುಟಬಹುದಾಗಿತ್ತೇನೋ.' ಆದರೆ ಅದು ಮಾಗಿಹೋಗಿತ್ತು. ಮನೆಯಲ್ಲಿ ಮದುವೆಯ ಒತ್ತಾಯ ಬೇರೆ ಹೆಚ್ಚುತ್ತಲೇ ಇತ್ತು. ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಸುರೇಶನಿಗೆ ತಿಳಿಸಲೇಬೇಕು. ಎಂದು ಪಟ್ಟು ಹಿಡಿದು, ಬಂಡು ಧೈರ್ಯದಿಂದ ಅವನಿಗೆ ತನ್ನ ಭಾವನೆಗಳನ್ನು ಪತ್ರದ ಮೂಲಕ ಹೇಳಿಯೇ ಬಿಟ್ಟಳು.
ಪತ್ರ ಕಳುಹಿದ ಮೇಲೆ ಮನಸ್ಸು ಸುಮ್ಮನಿರಬೇಕಲ್ಲ. ಯಾಕೆ ಪ್ರತ್ಯುತ್ತರ ಬರಲಿಲ್ಲ. ಪತ್ರ ತಲುಪಿತೋ ಹೇಗೋ. ಎಂದು ಹಲವು ಅನುಮಾನಗಳ ಸುಳಿಯಲ್ಲಿ ಆಕೆ ಸಿಲುಕಿದ್ದಳು. ಪ್ರತ್ಯುತ್ತರಕ್ಕಾಗಿ ನೀರಿನಿಂದ ಹೊರತೆಗೆದ ಮೀನಿನಂತೆ ವಿಲಿ-ವಿಲಿ ಒದ್ದಾಡುತ್ತಿದ್ದಳು. ಪತ್ರ ಇಂದು ಬರಬಹುದು, ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಳು. ಬಹುಷ್ಯ ಇಂದಿನಷ್ಟು ಸೌಲಭ್ಯಗಳಿದ್ದರೆ ಫೋನಾಯಿಸುತ್ತಿದ್ದಳೋ ಏನೋ..! ಕೊನೆಗೂ ಒಂದು ದಿನ ನಿರೀಕ್ಷೆಯ ಬಸುರನ್ನು ಒಡೆದು ಒಂದು ಪತ್ರ ಬಂದೆ ಬಿಟ್ಟಿತು.
ಪ್ರೀತಿಯ ಗೀತಾ,
ನಿನ್ನ ಪತ್ರವನ್ನು ಓದಿದೆ, ನಾನೂ ಸಹ ನಿನಗೆ ತುಂಬಾ ಪ್ರೀತ್ರಿಸುತ್ತಿದ್ದೇನೆ. ಆದರೆ, ಸ್ನೇಹಕ್ಕೆ ಚ್ಯುತಿ ಬರಬಹುದೆಂದು ನನ್ನ ಒಡಲಿನ ಪ್ರೀತಿಯನ್ನು ನಿನ್ನ ಜೊತೆ ಹಂಚಿಕೊಳ್ಳಲಿಲ್ಲ. ಈಗಲೂ ಅಷ್ಟೇ ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಇಂದು ಕ್ಷಣ ಜೀವಿಸಲಾಗದು. ನಾನು ನಿನ್ನಲ್ಲಿಗೆ ಬಂದು ನಿಮ್ಮ ತಂದೆಯ ಜೊತೆ ಮಾತಾಡುತ್ತೇನೆ. ಆದರೆ ಈಗ ನನ್ನ ತಂದೆಗೆ ಹುಷಾರಿಲ್ಲ ಆದ್ದರಿಂದ  ಚೇತರಿಸಿಕೊಂಡ ತಕ್ಷಣ ನಿನ್ನಲ್ಲಿಗೆ ಬರುತ್ತೇನೆ.
ಇತಿ ನಿನ್ನ ಪ್ರೀತಿಯ
ಸುರೇಶ.

ಪತ್ರ ಓದಿದ್ದೆ ಆಕೆಯ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ವಾರವಾಗುತಿತ್ತದ್ದಂತೆ ಈ ಕಡೆಯ ಪತ್ರ ಆಕಡೆಗೆ, ಆ ಕಡೆಯಿಂದ ಈ ಕಡೆಗೆ ಹೀಗೆ ಪ್ರೀತಿಯ ಪ್ರಹಸನ ನಡೆಯುತ್ತಿತ್ತು. ಆದರೆ ಈ ವಿಚಾರ ಮನೆಯಲ್ಲಿ ಮಾತ್ರ ಯಾರಿಗೂ ತಿಳಿದಿರಲಿಲ್ಲ. ತಿಳಿಯಲು ತಾನೆ ಹೇಗೆ ಸಾಧ್ಯ. ಪತ್ರಗಳೇನಿದ್ದರೂ ಸ್ನೇಹಿತೆಯ ಮನೆಗೆ ಹೋಗುತ್ತಿದ್ದವು. ಹೀಗೆ ಪ್ರೇಮ ಪತ್ರಾಯಣ ಮಂದುವರಿಯಿತು.
ದಿನಗಳೆದಂತೆ ಸುರೇಶ ಕಡೆಯಿಂದ ಪತ್ರಗಳು ಕಮ್ಮಿಯಾದವು. ಬಹುಷ್ಯ ಕಚೇರಿಯ ಕೆಲಸ ಹಾಗೂ ತಂದೆಯ ಆರೋಗ್ಯದಿಂದಾಗಿ ಸಮಯ ಜೋಡಿಸಲಾಗುತ್ತಿಲ್ಲವೆನೋ ಎಂದು ಸಮ್ಮನಾದಳು. ಈ ಕಡೆಯಿಂದ ವಾರವಾರಕ್ಕೆ ತಪ್ಪದೆ ಪತ್ರ ಹೋಗುತಿತ್ತು. ಅಂತೂ ಒಂದು ದಿನ ಸುರೇಶ ಕಡೆಯಿಂದ ಪತ್ರ ಬರುವುದು ಸಂಪೂರ್ಣವಾಗಿ ನಿಂತೆಬಿಟ್ಟಿತು.
ಸುರೇಶ ತಂದೆಯ ಆರೋಗ್ಯ ಏನಾಯಿತೋ? ಕಚೇರಿ ಕೆಲಸಗಳು ಹೆಚ್ಚಾದವೋ? ಏನಾಯಿತೋ ಏನೋ ಒಂದು ತಿಳಿಯದೆ ಗೀತಾ ದಿನಗಳನ್ನು ದೂಡುತ್ತಿದ್ದಳು. ಆದರೆ ಒಳಗಿದ್ದ ಪ್ರೀತಿ ಆಕೆಯನ್ನು ದಿನೇ-ದಿನೇ ಸುಡುತ್ತಲೇ ಇತ್ತು. ಕೊನೆಗೆ ತಾನೇ ಹೇಗಾದರೂ ಮಾಡಿ ಸುರೇಶನಲ್ಲಿಗೆ  ಹೋಗಬೇಕೆಂದು ನಿರ್ಧರಿಸಿದಳು. ಆದರೆ..... ಬೆಂಗಳೂರು ಎಂಥಾ ನಗರವೋ ಏನೋ, ಎಲ್ಲಿ ಹೋಗೋದು? ಹೇಗೆ ಹೋಗೋದು? ಅಲ್ಲಿ ಸುರೇಶ ಮನೆ ಎಲ್ಲಿರುವುದೋ ಏನೋ? ಇಲ್ಲಿಯವರೆಗೆ ಬರೀ ಪುಸ್ತಕದಲ್ಲಿ ಹಾಗೂ ಬೇರೆಯವರ ಬಾಯಿಂದ ಮಾತ್ರ ಬೆಂಗಳೂರಿನ ಬಗ್ಗೆ ಕೇಳಿದ ಈಕೆಗೆ ತಮ್ಮ ಹಳ್ಳಿಯೊಂದು ಬಿಟ್ಟರೆ ಬೇರೆನೂ ತಿಳಿಯದಷ್ಟು ಮುಗ್ಧೆ ಈಕೆ. ಹಾಗೆಂದು ಸುಮ್ಮನಿದ್ದರೆ ಪ್ರೀತಿಯನ್ನು ಕಳೆದುಕೊಳ್ಳಬೇಕಾಗುತ್ತದೆ, ಎಂದು ಕೊನೆಗೂ ಆಕುಂಚನಗೊಳ್ಳದೆ(ಕುಗ್ಗದೆ) ಬೆಂಗಳೂರಿಗೆ ಪ್ರಯಾಣ ಬೆಳೆಸಿಯೇ ಬಿಟ್ಟಳು. ಅಲ್ಲಿ ಇಳಿದಿದ್ದೆ ಅಲ್ಲಿನ ಜನ, ದೊಡ್ಡ ರಸ್ತೆ, ಕಟ್ಟಡಗಳು, ಟ್ರಾಫಿಕ್ ಎಲ್ಲವೂ ಆಕೆಯನ್ನು ಹೌಹಾರುವಂತೆ ಮಾಡಿತು. ತಂದಿದ್ದ ಅಲ್ಪಸ್ವಲ್ಪ ದುಡ್ಡಿನಿಂದ ಸುರೇಶ ಮನೆಯ ಕಡೆಗೆ ಹೊರಟಳು. ಮನೆ ಸಿಕ್ಕಿದ್ದೆ ತಡ ಖುಷಿ-ಖುಷಿಯಿಂದ ಮನೆಯ ಕಡೆಗೆ ಧಾವಿಸಿದಳು. ಆದರೆ ವಿಪಯರ್ಾಸ, ಜಾಳುಗಟ್ಟಿದ ಮನೆಯ ಬಾಗಿಲು, ಜಡಿದ ಬೀಗ ಅನೇಕ ಆಖ್ಯಾನಗಳ ವರಸೆಯನ್ನೇ ಹೇಳುತ್ತಿತ್ತು. ಛೇ.. ಹಾಗೇ ಯೋಚಿಸುವುದು ತಪ್ಪು ಎಂದು ಅಲ್ಲಿಂದ ಕಾಲು ಕಿತ್ತಿದಳು. ವಿದ್ಯಾಭ್ಯಾಸದಲ್ಲಿ ಪದವಿ ಮುಗಿದ ಈಕೆಗೆ ಅವನ ಕಚೇರಿಯ ವಿಳಾಸ ಹುಡುಕಿ ತೆಗೆಯುವುದು ಅಷ್ಟೇನು ಕಷ್ಟದ ಕೆಲಸವಾಗಿರಲಿಲ್ಲ. ಕೊನೆಗೂ ಕಚೇರಿ ಪತ್ತೆ ಹಚ್ಚಿ ಜೀವ ಕೈಯಲ್ಲಿ ಹಿಡಿದುಕೊಂಡು ಕಚೇರಿ ತಲುಪಿದಳು.
ಅಲ್ಲಿ ಸುರೇಶ ವಿಷಯದ ಸತ್ಯ ಕೇಳಿ ಆಕೆಯ ಹೃದಯ ಒಡೆದು ಹೋಯಿತು. ಕಣ್ಣೀರು ಸಮುದ್ರದಂತೆ ಉಕ್ಕಿ ಬಂದವು. 'ಕೊನೆಗೂ ನನ್ನ ಪ್ರೀತಿ ನನ್ನ ಕೈಸಿಗಲಿಲ್ಲ,' ಎಂದು ರೋಧಿಸುತ್ತಾ ಅವನ ಫೋಟೊ ಮೇಲಿದ್ದ ಹಾರವನ್ನು ಕಿತ್ತೆಸೆದಳು. ಅಷ್ಟೊಂದು ಗಾಢವಾಗಿದ್ದ ಪ್ರೀತಿ ಬದುಕಲು ಬಿಟ್ಟಿತೆ? ಅವಳ ಪ್ರಾಣಪಕ್ಷಿಯೂ ಆಗಂತುಕನಾಗಿ ಬಂದವನ ಹಿಂದೆ ಹಾರಿಹೋಯಿತು.
'ಕೊನೆಗೂ ಪತ್ರದಲ್ಲಿ ಒಂದಾದ ಪ್ರೀತಿ, ವಾಸ್ತವದಲ್ಲಿ ಒಂದಾಗಲೇ ಇಲ್ಲ.'
ಆತೀಶ. ಬಿ. ಕನ್ನಾಳೆ.

Sunday, December 12, 2010

ಅಮ್ಮನೆಂಬ ಬ್ರಹ್ಮ.....
(ತಾಯಿಯಾಗಿ ಮಲತಾಯಿಯಲ್ಲ)

 ಮೊನ್ನೆ ಟೆರಸ್ ಮೇಲೆ ನಿಂತು ರಾಜಧಾನಿಯ ರಹದಾರಿಗಳ ಕಡೆ ಕಣ್ಣು ಹಾಯಿಸಿದೆ. ಮೋಟಾರು-ಸೈಕಲ್ಗಳು ಎಗ್ಗಿಲ್ಲದೆ ಓಡಾಡುತ್ತಿವೆ. ಬರೀ ಅವುಗಳದ್ದೆ ಸದ್ದು. ವಾಹನಗಳ ಪರದಾಟ ನೋಡಿ-ನೋಡಿ ಸುಸ್ತಾಯ್ತು. ಅಲ್ಲಿಂದ ಟೆರಸ್ನ ಮತ್ತೊಂದು ಭಾಗಕ್ಕೆ ಬಂದು ಓಣೆಯ ರಸ್ತೆಯ ಕಡೆಗೆ ದೃಷ್ಟಿ ನೆಟ್ಟೆ. ಅದು ಸಾಯಂಕಾಲದ ಸಮಯ ರಸ್ತೆಯಲ್ಲೆಲ್ಲಾ ನೀರವ ಮೌನ. ಅಲ್ಲಿ ಒಂದು ಪುಟ್ಟ ಮನೆ, ಆ ಮನೆ ಹೊರಗೆ ಇಬ್ಬರು ಪುಟ್ಟ ಮಕ್ಕಳು ಬಹುಶಃ ಅಣ್ಣತಮ್ಮಂದಿರಿರಬಹುದೆನೋ ಅನಿಸಿತ್ತೆ. ಇಬ್ಬರ ಕೈಯಲ್ಲು ಒಂದೊಂದು ಬಿದಿರು ಅವರು ಮುಂದೆ ಯಾವುದೋ ಒಂದು ಯುದ್ಧ ನಡೆಯಲಿದೆ ಎಂಬಂತೆ ಖಡ್ಗಯುದ್ಧ ಪಾರಾಯಣದಲ್ಲಿ ತೊಡಗಿದ್ದರು.
ಆ ಮನಮೋಹಕ ದೃಶ್ಯ ಕಾಣುತ್ತಲೆ ಏನೋ ಒಂಥರಾ ಖುಷಿಯಾಗಿ, ಮನಸ್ಸಿಗೆ ರೆಕ್ಕೆ ಬಂದು ಹಾರಾಲಾರಂಭಿಸಿತು. ಮುಂದುವರಿದು ಆ ಬಾಲಕರ ಬಾಲ್ಯ ಚೇಷ್ಟೆಗಳನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ. ಅದು ಹಾಗೇ ಯಾವುದೋ ಒಂದು ಕಲ್ಪನ್ಪಾಲೋಕಕ್ಕೆ ಕರೆದೊಯ್ದಿತ್ತು. ನನ್ನ ಬಾಲ್ಯದ ಕುಚೇಷ್ಟೆಗಳು ನೆನಪಾಗಿ ಕಣ್ಣ ಅಂಚಲ್ಲಿ ಹನಿ ಮೂಡಿತು. ಮಳೆಹನಿಯಲ್ಲಿ ಮೆಂದು ಕಾಗದದ ದೋಣಿ ಮಾಡಿ ಆಡಿದ್ದು, ಮಳೆ ಬಾರದಿದ್ದಾಗ ಮಳೆ ಬಾರೋ ಮಲ್ಲೇಶ.. ಎಂದು ಹಾಡಿ ಕುಣಿದಾಡಿದ್ದು ಹೀಗೆ ಮಣ್ಮಂದೆ ಕನಸಿನ ಲೋಕವೆ ಅವತರಿಸಿ ನಿಂತಿತ್ತು. ಹಾಗೇ ಆ ಕ್ಷಣಗಳನ್ನು ಆಸ್ವಾದಿಸುತ್ತಿದ್ದೆ, ಅಷ್ಟರಲ್ಲೆ ಎಲ್ಲಿಂದ ಬಂದಳೋ ಆ ಮಹಾತಾಯಿ...! ಸುನಾಮಿಯಂತೆ ಬಂದವಳೆ ನಾಲ್ಕೈದು ವರ್ಷದ ಆ ಪೋರನನ್ನು ತನ್ನತ್ತ ಎಳೆದು ಕೈಯಲ್ಲಿದ್ದ ಬೆತ್ತ ಕಸಿದುಕೊಂಡು ಅದರಿಂದಲೇ ನಾಲ್ಕು ಬಾರಿಸಿ ಹುಡುಗನನ್ನು ಭವ್ಯ ಬಂಗಲೆಯೊಂದಕ್ಕೆ ಎಳೆದೊಯ್ದಳು. ಇನ್ನೊಬ್ಬ ಹುಡುಗ ಮಾತ್ರ ತುಟಿ ಪಿಟಕ್ ಅನ್ನದೆ ಮ್ಲಾನವದನದಿಂದ ಚರಂಡಿಯ ಪಕ್ಕ ನಿಂತು ಕಂಬನಿಗೆರೆಯುತ್ತಿದ್ದನು. ನನಗೆ ಒಂದೂ ತಿಳಿಯಲಿಲ್ಲ. ಆ ಘಟನೆಯ ಜೊತೆಗೆ ಅನೇಕ ಪ್ರಶ್ನೆಗಳು ಕವಲೊಡೆಯುತ್ತಿದ್ದವು. ಆ ಯಮ್ಮ ಆ ಹುಡುಗನನ್ನೆ ಏಕೆ ಎಳೆದೊಯ್ದರು? ಈ ಹುಡುಗ ಮಾತ್ರ ಯಾಕೆ ಇಲ್ಲೆ ನಿಂತಿದ್ದಾನೆ? ಹಾಗೇನಾದ್ರು ತಪ್ಪು ಮಾಡಿದಿದ್ರೆ ಇಬ್ಬರನ್ನು ಹೊಡೆಯಬೇಕಿತ್ತು. ಯಾಕೆ ಆ ಒಬ್ಬ ಪೋರನನ್ನೆ ಹೊಡೆದು ಎಳೆದೊಯ್ದರು? ಬಹುಶಃ ಆಕೆ ಈ ಹುಡುಗನ ಮಲತಾಯಿ ಏನಾದ್ರು ಆಗಿರಬಹುದೆ? .... ಹೀಗೆ ನೂರಾರು ಪ್ರಶ್ನೆಗಳು ಪುಂಖಾನುಪುಂಖವಾಗಿ ಹೊರಗೆಡುಹುತ್ತಿದ್ದರಿಂದ ಪ್ರಶ್ನೆಗಳ ವರಸೆಯೇ ನನ್ನೆದುರಿಗಿತ್ತು.

ಇದರ ಜೊತೆಗೆ ಆನೆಗಾತ್ರದ ಮಹಿಳೆ ಮೇಲೆ ನನಗೆ ಎಲ್ಲಿಲ್ಲದ ಕೋಪ. ಏಕೆಂದರೆ, ಆ ಹುಡುಗರ ಬಾಲ್ಯ ಕುಚೇಷ್ಟೆಗಳನ್ನು ಗಮನಿಸುತ್ತಾ ಕ್ಷಣಕಾಲ ಇಡೀ ಪ್ರಪಂಚವನ್ನು ಮರೆತು ನನ್ನ ಬಾಲ್ಯದಲ್ಲಿ ಕಳೆದುಹೋಗಿದ್ದೆ. ಆ ಕನಸಿನ ಮಹಲನ್ನು ಕ್ಷಣದಲ್ಲಿ ನುಚ್ಚುನೂರು ಮಾಡಿದಳಲ್ಲ ಈ ರಾ.....ಕ್ಷಸಿ ಎಂಬ ಕಾರಣಕ್ಕಾಗಿಯೋ ಏನೊ ಕೊಪ ಕಾಡುತಿತ್ತು.
ಅದೇನೆ ಇರಲಿ, ಮಹಿಳೆ ಆ ರೀತಿ ವತರ್ಿಸುವುದಕ್ಕೆ ಕಾರಣ ಆದ್ರು ಏನು....?? ಯೋಚಿಸಿದೆ ಏನೂ ತೋಚಲಿಲ್ಲ. ಸರಿ ಇದರ ಉತ್ತರ ಈ ಹುಡುಗನಿಂದ ಮಾತ್ರ ಸಾಧ್ಯ ಎಂದು ಅವನ ಕಡೆ ಹೊರಟೆ. ಕ್ಷಣಕಾಲ ಅವನ ಮುಖದ ಹತಾಶೆಯನ್ನು ಜಾಲಾಡಿ, ಕಣ್ಣಿನ ಆಳದಲ್ಲಿ ಅಡಗಿದ್ದ ಮುಗ್ಧತೆಯನ್ನು ಗಮನಿಸಿ, ಮರಿ ನಿನ್ ಹೆಸರೇನು ಎಂದು ಕೇಳಿದೆ. ಅದಕ್ಕೆ ಆಕಾಶ್ ಎಂದು ಗಲ್ಲ ಉಬ್ಬಿಸಿಕೊಂಡು ಉತ್ತರಿಸಿದ. ನನಗೆ ಅವನ ವದನ ನೋಡಿ ಕಪಿ ನೆನಪಾಗಿ ಕೊಂಚ ನಗುಬಂತು ಆದರೂ ನಗಲಿಲ್ಲ. ಪುಟ್ಟ ಯಾಕೋ ನಿಮ್ಮಮ್ಮ ನಿನ್ನ ತಮ್ಮನನ್ನು ಮಾತ್ರ ಕರೆದುಕೊಂಡು ಹೋದ್ರು ಎಂದು ಕೇಳಿದ್ದೆ ತಡ ಅದಕ್ಕೆ ಅವನು ನನ್ನ ತಮ್ಮ ಅಲ್ಲ; ನನ್ನ ಸ್ನೇಹಿತ ಅಷ್ಟೆ. ಅವನು ಇರೋದು ಆ ಬಂಗಲೆಯಲ್ಲಿ; ನಾವಿರೋದು ಈ ಗುಡಿಸಲಲ್ಲಿ. ಎಂದು ಬೆರಳು ತೋರಿದ. ಅಂಕಲ್ ನಾವು ಬಡವರಂತೆ ಅದಕ್ಕೆ ಆನಂದನನ್ನು ನನ್ನ ಜೊತೆ ಆಡೋದಕ್ಕೆ ಬಿಡೋದಿಲ್ಲ. ಎಂದು ಜೋರಾಗಿ ಆಳಲಾರಂಭಿಸಿದ. ಆ ಪುಟ್ಟನ ಮುಗ್ಧ ಮಾತುಗಳನ್ನು ಕೇಳಿ ನನ್ನ ಕಣ್ಣನಾಲಿಯಲ್ಲಿ ಕಂಬನಿ ಮೂಡಿದವು. ಆ ಘಟನೆಯ ಕಾರಣ ಹಾಗೂ ಸ್ವಾರಸ್ಯ ನನಗೆ ದರ್ಪಣದಷ್ಟು ನಿಚ್ಚಳವಾಯ್ತು.
ನಂತರ ಚಹ ಹೀರಲು ಸಹ ಮನಸ್ಸಾಗಲಿಲ್ಲ. ಯಾಕೋ ಮನಸ್ಸು ಯಾವ ಕೆಲಸಕ್ಕೂ ಒಪ್ಪದೆ, ಹೃದಯ ಭಾರವಾಗಿತ್ತು. ಪದೇ-ಪದೇ ಆ ಪುಟಾಣಿ ಹೇಳಿದ ಅಂಕಲ್ ನಾವು ಬಡವರಂತೆ ಎಂಬ ಮಾತು ನನ್ನ ಕಿವಿಯಲ್ಲಿ ಪುನರಾವರ್ತನೆ ಆಗುತಿತ್ತು.
ಯಾಕೆ ನಮ್ಮ ಸಮಾಜದ ಈ ಜನ ಶಿಕ್ಷಣ ಹಾಗೂ ಜೀವನಮಟ್ಟದಲ್ಲಿ ಮೇಲೆ ಹೋದಂತೆಲ್ಲಾ ಈ ರೀತಿ ಯೋಚಿಸುತ್ತಾರೆ. ಇದರಲ್ಲಿ ಆ ಮಕ್ಕಳ ತಪ್ಪಾದರೂ ಏನು? ಯಾರೂ ತಮ್ಮ ಇಚ್ಛೆಯಿಂದ ಬಡವರಾಗುವುದಿಲ್ಲ ಎಂಬ ಸತ್ಯ ತಿಳಿದಿದ್ದರೂ ಏಕೆ ಜಾಣಕುರುಡರಂತೆ ನಡೆದುಕೊಳ್ಳುತ್ತಾರೆ. (ನಿಜ, ಇಂದು ಆದರ್ಶ ಹಾಗೂ ನೈಜತೆಯ ನಡುವೆ ಕಲ್ಪನೆಗೂ ಎಟುಕದ ಕಂದಕ ಏರ್ಪಟ್ಟಿದೆ.) ಆದರೆ ಇಲ್ಲಿ ಪರಿಗಣಿಸಲೇಬೇಕಾದ ಅತೀ ಪ್ರಮುಖವಾದ ಅಂಶವೆಂದರೆ, ಈ ರೀತಿಯ ಘಟನೆಗಳು ಬೆಳೆಯುವ ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಲ್ಲವು ಎಂಬ ಪರಿಕಲ್ಪನೆ ಪೋಷಕರಿಗಿಲ್ಲವೆ?!


ಇಂದು ಮಕ್ಕಳ ಜೀವನದಲ್ಲಿ ಮಾರ್ಗದರ್ಶಕಿ ಹಾಗೂ ಶಿಕ್ಷಕಿಯ ಸ್ಥಾನದಲ್ಲಿರಬೇಕಾದ ತಾಯಂದಿರು ಇಂಥ ಕೀಳುದಜರ್ೆಯ ಆಲೋಚನೆಗೆ ಇಳಿದರೆ ನಮ್ಮ ಸಮಾಜದ ಮುಂದಿನ ಸ್ಥಿತಿ ಏನಾಗಬೇಕು....?
ಆಗ ತಾನೆ ಜನಿಸಿದ ಮಗು ಮಾಂಸದ ಮುದ್ದೆಯಂತಿದ್ದು, ಸಮಾಜ ಹಾಗೂ ಅದರ ಸುತ್ತಲಿನ ವಾತಾವರಣ ಅದರ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದ ಆ ಮಗು ಅಂಥದ್ದೇ ಸಂಸ್ಕಾರಗಳನ್ನು ಮ್ಕೈಗೂಡಿಸಿಕೊಳ್ಳುತ್ತದೆ. ಎಂಬ ಸಮಾಜಶಾಸ್ತ್ರಜ್ಞರ ಮಾತು ಇಲ್ಲಿ ನೆನೆಯಲೇಬೇಕು. ಏಕೆಂದರೆ, ಒಂದು ಮಗು ಬೆಳೆದು ಸಮಾಜಘಾತುಕ ಅಥವಾ ಸಮಾಜ ಸುಧಾರಕನೂ ಆಗಬಲ್ಲ. ಅದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅದರ ಬಾಲ್ಯದಲ್ಲಿ ನೀಡುವ ಸಂಸ್ಕಾರವನ್ನೇ ಅವಲಂಭಿಸಿದೆ. ಮಾತೃಗರ್ಭದಲ್ಲಿರುವ ಭ್ರೂಣದ ಮೇಲೆ ಸುತ್ತಲಿನ ವಾತಾವರಣ ಪರಿಣಾಮ ಬೀರುತ್ತದೆ ಎಂದು ಒಂದು ಸಂಶೋಧನೆ ಸಿದ್ಧಾಂತ ಪಡಿಸಿದೆ. ಹೀಗಿರುವಾಗ ಮಾಂಸದ ರೂಪವನ್ನು ದಾಟಿ ಆಲೋಚನೆ ಮಾಡುವಷ್ಟು ಬೆಳೆದಿರುವ ಮಕ್ಕಳ ಮೇಲೆ ಇಂತಹ ಘಟನೆಗಳು ಬೀರದಿರಲು ಸಾಧ್ಯವೇ?
ಮಗು ಇನ್ನೂ ಮೂರು ಹೆಜ್ಜೆ ಸ್ವತಂತ್ರವಾಗಿ ಇಡಲಾಗದು ಆಗಲೇ ಅದಕ್ಕೆ ವರ್ಗಭೇದದ ಕುರಿತು ಬೋಧಿಸುವುದಾದರೆ ಭವಿಷ್ಯದಲ್ಲಿ ಆ ಮಕ್ಕಳು ಉತ್ತಮ ಪ್ರಜೆಗಳಾಗಬಲ್ಲರು ಎಂಬ ಖಾತ್ರಿಯಾದರೂ ಏನು..?
ಕೊಂಚ ಯೋಚಿಸಿ: ಅಂದು ಛತ್ರಪತಿ ಶಿವಾಜಿ ಅವರ ತಾಯಿ ಮಗನಿಗೆ ರಾಚಾಯಣ, ಮಹಾಭಾರತ ಆದರ್ಶಗಳನ್ನು ಬೋಧಿಸಿ, ಅವರ ರಕ್ತದ ಕಣ-ಕಣದಲ್ಲಿ ದೇಶಪ್ರೇಮ ತುಂಬದೇ ಹೋಗಿದ್ದಲ್ಲಿ ಅವರು ರಾಷ್ಟ್ರರಕ್ಷಣೆಯನ್ನಿ ನಿಲ್ಲಲಾಗುತಿತ್ತೆ? ವಿವೇಕಾನಂದರು ಭಾರತನ್ನು ಅಷ್ಟಾಗಿ ಪ್ರೀತಿಸಲು ಕಾರಣ ಅವರ ತಾಯಿ ಬಾಲ್ಯದಲ್ಲಿ ನೀಡಿದ ಶಿಕ್ಷಣ. ಅಷ್ಟೇ ಯಾಕೆ ಇಂದು ಅನೇಕ ಯೋಧರು ಯಾವುದೇ ವರ್ಣ, ವರ್ಗಭೇದವನ್ನು ಕಾಣದೆ ನಮ್ಮ ತಮ್ಮ ಜೀವ ಒತ್ತೆಯಿಟ್ಟು ಗಡಿ ಕಾಯುತ್ತಿರುವುದಕ್ಕೆ ಅವರ ತಾಯಂದಿರೂ ಕಾರಣವಾಗಿರಬಹುದು. ಒಂದು ವೇಳೆ ಅವರಿಗೂ ಮೇಲು-ಕೀಳು, ವರ್ಣ-ವರ್ಗಭೇದಗಳ ಪ್ರಬೋಧನೆ ನೀಡುತ್ತಿದ್ದಲ್ಲಿ ನಮ್ಮ ರಾಷ್ಟ್ರದ ಗತಿ ಏನಾಗುತಿತ್ತು.....?
ಅದಕ್ಕಾಗಿ ತ್ಯಾಗ, ಪ್ರೀತಿ, ಮಮತೆಗೆ ಪ್ರತೀಕವಾಗಿರುವ ತಾಯಂದಿರೆ ನಿಮ್ಮ ಮಕ್ಕಳ ಕೋಮಲವಾದ ಮನಸ್ಸನ್ನು ಹಾಳುಮಾಡಬೇಡಿ. ನೀವೇ ಅವರ ಪಾಲಿಗೆ ಬ್ರಹ್ಮ ನೀವು ರೂಪಿಸಿದಂತೆಯೇ ರೂಪುಗೊಳ್ಗ್ಳುತ್ತಾರೆ. ಹೀಗಾಗಿ ನಿಮ್ಮ ಮಕ್ಕಳ ಧಮನಿ-ಧಮನಿಗಳಲ್ಲಿ ರಾಷ್ಟ್ರಪ್ರೇಮವನ್ನು ತುಂಬಿ, ಹೊರತು ಸಮಾಜ ಕಂಠಕಗಳನ್ನಲ್ಲ.
ಆತೀಶ್.ಬಿ.ಕನ್ನಾಳೆ